Wednesday, January 6, 2010

ಭಾಷಾಭಿಮಾನದ ಕನ್ನಡ ರಾಜ್ಯೋತ್ಸವ..!?

"ಹೆಲ್ಲಾರಿಗೂ ನಮಸ್ಕಾರ. ಹಿಂದು ನಮ್ಮ ಸುದಿನ. ಕನ್ನಡ ಮಾತೆಯ ಮಕ್ಕಲಾದ ನಾವು  ಎಮ್ಮೆ ಪಡುವ ದಿನ. ಪ್ರತಿ ವರ್ಷದಂತೆ ಇ ವರ್ಷವೂ ನಾವು ಕನ್ನಡ ರಾಜ್ಯೋತ್ಸವ ಅಬ್ಬವನ್ನು ನಮ್ಮ ಕನ್ನಡ ಇತರಕ್ಷಣ ವೇದಿಕೆ ವತಿಯಿಂದ ಹಾಚರಿಸುತ್ತಿದ್ದೇವೆ . ಎಲ್ಲಾರಿಗೂ  ಕನ್ನಡ ಮಾತೆಯ ಪೂಜೆಗೆ ಹಾದರದ ಸ್ವಾಗತ...."

ಏನಿದು..?, ಏನಂದಿರಿ..? ಎಂಬ ತಳಮಳವೇ?
ಹೌದು. ಖಂಡಿತ.!!
ಇದು ಕಳೆದೊಂದು ತಿಂಗಳಿನಿಂದ ಮಹಾನಗರ ಬೆಂಗಳೂರಿನ ಬೀದಿ ಬೀದಿಗಳಲ್ಲಿ ಸಂಜೆ ಆರರ ಸಮಯದಲ್ಲಿ ಕೇಳುತ್ತಿದ್ದ ಮಾತುಗಳಿವು. ನವೆಂಬರ್ ಬಂತೆಂದರ ಎಚ್ಚೆತ್ತುಕೊಳ್ಳುವ ಕನ್ನಡ ಸಂಘಟನೆಗಳು ನಡೆಸುವ ರಾಜ್ಯೋತ್ಸವ ಕಾರ್ಯಕ್ರಮದ ಆರಂಭದಲ್ಲಿ ಕೇಳಿಬಂದಂತಹ ಉಕ್ತಿಗಳಿವು. ಇಲ್ಲಿ ಆರಂಭವಾದದ್ದು ಕಾರ್ಯಕ್ರಮದುದ್ದಕ್ಕೂ ಕೇಳಿದ ನುಡಿಗಳು. ಕನ್ನಡದ ರಕ್ಷಕರ ಕನ್ನಡ ಭಕ್ಷಣೆಯಿದು.

ನಮ್ಮದು ಕರುನಾಡು. ಅನೇಕ ದಿಗ್ದರ್ಶಕರನ್ನು, ದಾರ್ಶನಿಕರನ್ನು ನೀಡಿದ ನಾಡು. ಅಂತೆಯೇ ಅತ್ಯಂತ ಸುಂದರ ಭಾಷೆಯನ್ನು ಪಡೆದವರು ನಾವು. ಬೇಂದ್ರೆ, ಕುವೆಂಪು, ಅಡಿಗ ಮೊದಲಾದ ಸಾಹಿತ್ಯ ಸಾರಸ್ವತರ ಕಂಡ ನಾಡು ನಮ್ಮದು. ಇಂತಹ ನಾಡಲ್ಲಿ ನಮ್ಮ ಕನ್ನಡ ಇಂದು ಏನಾಗಿದೆ ಎಂಬುದನ್ನು ಮೊದಲ ನಾಲ್ಕು ಸಾಲುಗಳು ಹೇಳುತ್ತವೆ.

ಇಂದು ಮಹಾನಗರ ಹಲವು ಸಂಸ್ಕೃತಿಯ ಜನರ ಬೀಡಾಗಿದೆ. ಅವರೆಲ್ಲರ ಮಧ್ಯೆ ನಮ್ಮತನ ಉಳಿಸುವ ಮಾಡುತ್ತೇವೆಂದು ಹೇಳುವ ಕನ್ನಡಪರ ಹೋರಾಟಗಾರರ ಮಾತು ಕೇಳಿದರೆ ನಾವೆಲ್ಲಿದ್ದೇವೆಂಬ ಚಿಂತೆ ಮನಸ್ಸಿನಲ್ಲಿ ಶುರುವಾಗುತ್ತದೆ. ನಾನು ಸಹ ಇಂತಹ ಮಾತುಗಳನ್ನು ಇತ್ತೀಚೆಗೆ ಕೇಳಿದಾಗ ಅದು ಇಲ್ಲಿ ಬರೆಯುವುದಕ್ಕೆ ಸಾಧ್ಯವಾಯಿತು.

 ಸಂಜೆ ಆರರ ಸಮಯದಲ್ಲಿ ಕಚೇರಿಯಿಂದ ಮನೆಗೆ ಹಿಂತಿರುಗುತ್ತಿದ್ದಾಗ ದಾರಿಮಧ್ಯೆ ನಡುಯುತ್ತಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ  ಕೇಳಿದ ಮಾತುಗಳಿವು. ನಮ್ಮ ಕನ್ನಡನಾಡಿನ ಶ್ರೇಷ್ಠತೆಯ ಕಾರ್ಯಕ್ರಮವೆಂದು ಸ್ವಲ್ಪ ಹೊತ್ತು ಅಲ್ಲಿ ನಿಂತಾಗ ಹಲವು ಸತ್ಯಗಳು ಬಯಲಾದವು. ನಿರೂಪಕ ಮುಂದುವರೆಸಿ "ಈಗ ನಮ್ಮ ಸದಸ್ಯರ ಪುತ್ರ ಎಲ್ದನೆ ಕ್ಲಾಸ್ನಲ್ಲಿ ಸ್ಟಡಿ ಮಾಡುತ್ತಿರುವ ಹಾದರ್ಶ ಅವರಿಂದ ನೃತ್ಯ ಕಾರ್ಯಕ್ರಮ" ಎಂಬುದನ್ನು ಕೇಳಿ, ಚಿಕ್ಕಂದಿನಲ್ಲಿ ನಾಟಕಗಳನ್ನು ನೆನಪಿಸಿಕೊಂಡು ನಿಂತೆ. ಸ್ವಲ್ಪದರಲ್ಲೇ ಹಾಡು ಆರಂಭವಾಯಿತು. " ಹೇ ಪಾರೂ... ಹೇ  ಪಾರೂ... "

ಕನ್ನಡ ನಾಡು ನುಡಿಗೆ ಹೆಮ್ಮೆಯನ್ನು ಪ್ರಸ್ತುತ ಪಡಿಸುವ ಹಾಡೊಂದಕ್ಕೆ ಆ  ಪುಟ್ಟ ಆದರ್ಶ (, ಅಲ್ಲ 'ಹಾದರ್ಶ'!)  ಕುಣಿಯಬಹುದೆಂಬ ನನ್ನ ಆಸೆ ಅಲ್ಲೇ ಕಮರಿತ್ತು. ಮುಂದೆ  ಐತಲಕ್ಕಡಿ.. ಮುಂತಾದ ಹಾಡುಗಳ ಸಾಲೋ ಸಾಲು. ನಿರೂಪಕ ಹೇಳಿದಂತೆ ಇದೊಂದು 'ಇತರಕ್ಷಣ ವೇದಿಕೆಯ ಎಮ್ಮೆಯ ದಿನ' ಎಂದುಕೊಳ್ಳುತ್ತ ಮನೆಗೆ ಬಂದು ದೂರದರ್ಶನವನ್ನು ಹಾಕಿದರೆ - ಅಲ್ಲೂ ನೃತ್ಯ ಕಾರ್ಯಕ್ರಮವೊಂದರ ಕನ್ನಡ ರಾಜ್ಯೋತ್ಸವ ವಿಶೇಷ ಸಂಚಿಕೆಯಲ್ಲಿ ಬಹುಜನರ ಅಪೇಕ್ಷೆಯ ಮೇರೆಗೆ ಒನ್ಸ್ ಮೋರ್ "ಹೇ ಪಾರೂ... ಹೇ  ಪಾರೂ... ".

ಭಾಷಾಭಿಮಾನವು ಸದಭಿರುಚಿಯೊಂದಿಗೆ ಹೊರಡಲಿ..!
ಏನಂತೀರಿ?

Tuesday, December 22, 2009

ಹಬ್ಬದ ಸಂಭ್ರಮ ಫೆಸ್ಟಿವಲ್ ನಲ್ಲಿ ಸಿಕ್ಕಿತೇ..!?

 ಹಳ್ಳಿಯಲ್ಲಿ.. 
ಮನೆಯಲ್ಲಿ ಎಲ್ಲೆಲ್ಲೂ ಸಡಗರ.. ಚಿಕ್ಕ ಮಗುವಿನಾದಿಯಿಂದ ಹಿರಿಯಜ್ಜನಲ್ಲೂ ಉತ್ಸಾಹದ ಚಿಲುಮೆ.. ಅಸ್ಟೇ ಅಲ್ಲ ಕೊಟ್ಟಿಗೆಯ ಗೋವುಗಳಲ್ಲೂ ಹುರುಪು.. ಮನೆ ಕಾಯುವ ಶ್ವಾನವು ನಿಂತಲ್ಲಿ ನಿಲ್ಲುತ್ತಿರಲಿಲ್ಲ. ಹೌದು.. ಇದು ಹಬ್ಬ ಬಂತೆಂದರೆ ಹಳ್ಳಿಮನೆಯಲ್ಲಿ ಕಾಣುತ್ತಿದ್ದ ದೃಶ್ಯಗಳು. ಇಸ್ಟೇ
ಅಲ್ಲ ಈ ಸಲ ಏನು ಕಜ್ಜಾಯ ಮಾಡುವುದು. ಯಾರು ಯಾವ ಹೊಸ ಬಟ್ಟೆ ತೊಡುವುದು ಇತ್ಯಾದಿ.. ಹಳ್ಳಿ ಮನೆಗಳಲ್ಲಿ ದೀಪಾವಳಿಯಾದಿ   ಹಬ್ಬಗಳ ಸಮಯದಲ್ಲಿ ಇಂತದ್ದೊಂದು ಹುರುಪು, ಉತ್ಸಾಹ ಸದಾ ಇರುತ್ತದೆ. ಮನೆ ಮಂದಿಯೆಲ್ಲ ಒಂದಾಗಿ ಆಚರಿಸುವ ಹಬ್ಬ ಹರಿದಿನಗಳು ಒಂದು ಮೌಲಿಕ ಭಾವನೆಯನ್ನು ವ್ಯಕ್ತಪಡಿಸುತ್ತದೆ.  

ಪಟ್ಟಣದಲ್ಲಿ..
"ಹೇ ನಾಡಿದ್ದು ದೀಪಾವಳಿ ಅಂತೆ.. ನಿಂಗೂ ರಜಾ ಇದೆಯಲ್ಲಾ.. ಎಷ್ಟು ದಿನ ರಜಾ.. ಫೆಸ್ಟಿವಲ್ ಆದ್ರಿಂದ ದೇವಸ್ಥಾನಕ್ಕೆ ಹೋಗಬೇಕು.. ಯಾವ ದೇವಸ್ಥಾನಕ್ಕೆ ಹೋಗೋಣ.. ಗಾಳಿ ಆಂಜನೇಯನಲ್ಲಿಗೋ, ಗಣಪತಿಯಲ್ಲಿಗೋ, ಗವಿ ಗಂಗಾಧರೇಶ್ವರನಲ್ಲಿಗೋ.. ಬೇಗನೆ ಯೋಚಿಸು. ಆಮೇಲೆ ಉಟಕ್ಕೆ ಹಳ್ಳಿಮನೆಗೆ ಹೋಗೋಣ.. ನಂತರ ಲಾಲ್ಬಾಗಿಗೆ ಹೋಗಿ  ಎಂ ಟಿ ಆರ್ ನಲ್ಲಿ  ಫೆಸ್ಟಿವಲ್ ಊಟ ಮಾಡಿ ಮನೆಗೆ ಹೋಗಿ ಪಟಾಕಿ ಸಿಡಿಸೋಣ." ಏನಂತಿ?
ಅಬ್ಬಬ್ಬಾ ಅಂದಿರಾ!? ಹಾಂ..!! ಇದು ಎರಡು ಮುಖಗಳ ವಾಸ್ತವಿಕತೆ. ಹಳ್ಳಿಗೂ ದಿಲ್ಲಿಗೂ(ಪಟ್ಟಣ) ಅಂತರ.. ಅಂತರಾಳ.. ಹಳ್ಳಿಯ ಸಂಭ್ರಮ ಪಟ್ಟಣದಲ್ಲಿಲ್ಲ. ಪಟ್ಟಣದ ಗೌಜಿ ಗದ್ದಲ ಹಳ್ಳಿಯಲ್ಲಿಲ್ಲ. ಎಲ್ಲರೂ ಹಬ್ಬವನ್ನು ಆಚರಿಸುವವರೇ..

ಆದರೆ...

ಹಳ್ಳಿಯಲ್ಲಿ ಪ್ರತಿಯೊಬ್ಬನ ಭಾವನೆಗಳು ಸ್ಪುಟಗೊಳ್ಳುತ್ತವೆ. ತನ್ನೆಲ್ಲ ಯೋಚನೆಗಳನ್ನು ಬದಿಗಿಟ್ಟು ಸಂಭ್ರಮದಿಂದ ಹಬ್ಬದಲ್ಲಿ ಎಲ್ಲರೊಂದಾಗಿ ಭಾಗವಹಿಸುತ್ತಾರೆ.
ಇತ್ತ ಪಟ್ಟಣದಲ್ಲಿ ನಾಳೆಯ ಚಿಂತೆಯಲ್ಲಿ ಇಂದಿನ ಫೆಸ್ಟಿವಲ್. ಇಂದು ಕೆಲಸಕ್ಕೆ ರಜಾ, ಹಾಗಾಗಿ ವಿರಾಮವನ್ನು ಬಯಸುತ್ತಾ ದೇವದರ್ಶನ ಮಾಡಬಯಸುತ್ತಾರೆ ಜನ. ಅದಕ್ಕಾಗಿ ಫೆಸ್ಟಿವಲ್ ಲಂಚ್ ಗೆ ಹಳ್ಳಿಮನೆಗೋ, ವಿರಾಮಕ್ಕಾಗಿ ಲಾಲ್ಭಾಗಿಗೋ ಮುಖ ಮಾಡುತ್ತಾರೆ. ಫೆಸ್ಟಿವಲ್ ಸುಖವನ್ನು ಪಟಾಕಿ ಸಿಡಿಸಿ ಆಚರಿಸುತ್ತಾರೆ.

ಇತ್ತ ಹಳ್ಳಿಯಲ್ಲಿ ಅತ್ತೆ ಸೊಸೆಯರು ವಿಧ ವಿಧವಾದ ಕಜ್ಜಾಯಗಳನ್ನು ಮಾಡುವುದರಲ್ಲಿ ಮಗ್ನರಾಗಿದ್ದರೆ ಅಪ್ಪ ಮಗ ದೇವ ಪೂಜೆ, ಗೋಪುಜೆಯ ತಯಾರಿಯಲ್ಲಿರುತ್ತಾರೆ. ಎಲ್ಲಾ ತಯಾರಿ ಆದ ನಂತರ ಪುಜಾದಿ ಕಾರ್ಯ ಮಾಡಿ, ಕಜ್ಜಾಯ ನೈವೇದ್ಯ ಆದ ನಂತರ ಸುಖ ಭೋಜನ. ನಂತರ  ಸ್ವಲ್ಪ ಹರಟೆ, ವಿಶ್ರಾಂತಿ. ಸಂಜೆ ಅಲ್ಪ ಸ್ವಲ್ಪ ಪಟಾಕಿ ಸಿಡಿಸಿದರು ದಿಪಾಲ್ನ್ಕಾರಕ್ಕೆ ಹೆಚ್ಚಿನ ಮಹತ್ವ ಕೊಡುತ್ತಾರೆ.
 
ಮೊದಲೇ ಹೇಳಿದಂತೆ ಇದು ಎರಡು ಮುಖಗಳ ವಾಸ್ತವಿಕತೆ. ಹಳ್ಳಿಗಳು ನಗರಗಳಾಗುತ್ತಿರುವ ಕಾಲದಲ್ಲಿ ಮುಂದಿನ ಪೀಳಿಗೆ  ಈ ಸಂಭ್ರಮವನ್ನು ಪಡೆಯುತ್ತಾ ಎಂಬ ಆತಂಕ ನನ್ನದು. ಅದಕ್ಕಾಗಿ ಪಟ್ಟಣದಲ್ಲಿರುವ ಮಿತ್ರರಲ್ಲಿ ಹಬ್ಬಹರಿದಿನಗಳನ್ನು ಹಳ್ಳಿಮನೆಯಲ್ಲಿ  ಆಚರಿಸೊಣ ಎಂಬ ವಿನಂತಿ. ಇದು ಸನಾತನ ಸಂಸ್ಕೃತಿಯ ಕೌಟುಂಬಿಕ ಜೀವನ ಪದ್ದತಿಯನ್ನು ಎತ್ತಿ ಹಿಡಿಯುವಲ್ಲಿ ಮಹತ್ತರ ಪಾತ್ರವನ್ನು ನೀಡುತ್ತದೆ ಎಂಬ ಆಶಯ ನನ್ನದು. ಇಲ್ಲಿ ನಾನು ಹಬ್ಬವನ್ನು ಉದಾಹರಿಸಿ ವಿಷಯವನ್ನು ಪ್ರಸ್ತಾಪಿಸಿದ್ದೆನೆಷ್ಟೇ. ಇಷ್ಟೇ  ಅಲ್ಲ ಆ ನಿರ್ಮಲ ಪಕೃತಿ.. ಆ ಪ್ರಶಾಂತ ಪರಿಸರ.. ಕೂಡ ನಮ್ಮನ್ನು ಇನ್ನಷ್ಟು ಸುಖಿಗಳನ್ನಾಗಿಸುತ್ತೆ  ಅಲ್ಲವೇ..?   

ಇಂತಿ
ಅಜ್ಜಕಾನ ರಾಮ

Friday, August 28, 2009

ಬದಲಾದ ಕಾಲದೊಳು ಬಾಲ್ಯದ ನೆನಪು.

ಹಳ್ಳಿಯಲ್ಲಿ:
ಕಾಲಕ್ಕೆ ತಕ್ಕ ವೇಷ, ಭೂಷಣ, ಸಂಸ್ಕೃತಿ. ಹಿಂದೆ ಮಳೆಗಾಲದ ಕೆಲವು ತುಣುಕುಗಳನ್ನು ಹೇಳುತ್ತಾ, ಮಳೆಗಾದ ತಿಂಡಿಗಳ ಬಗ್ಗೆ ಮುಂದೆ ಬರೆಯುವೆ ಅಂದಿದ್ದೆ. ನಾಲ್ಕಾರು ದಿನಗಳ ಹಿಂದೆ ಆಷಾಡ ಮಾಸದ ದುರ್ಗಾ ನಮಸ್ಕಾರ ಪೂಜೆಗಾಗಿ ಊರಿಗೆ ಹೋಗಿದ್ದಾಗ ಅವುಗಳನ್ನು ಸವಿಯುವಂತಾಗಿತ್ತು. ನಾಲ್ಕು ದಿನ ಸಪ್ಪಗಾಗಿದ್ದ ಮಳೆ ಮತ್ತೆ ಭೋರ್ಗರೆಯಲು ಸುರುವಿಟ್ಟಿತ್ತು. ಅದೂ ಮನೆಯಿಂದ ಹೊರ ಹೊರಡಲಾಗದಂತ ಪರಿಸ್ಥಿತಿ. ಏನು ಮಾಡುವುದು, ಒಂದೇ ಕೆಲಸ ಅಮ್ಮ ಮಹಾನಗರಿಯಲ್ಲಿ ಸಿಗದ ತಿಂಡಿಗಳು ನನಗೀಗ ಬೇಕು.
ಸರಿ ಸುರುವಾಯಿತು, ಬೆಳಗ್ಗೆ ತಿಂಡಿಗೆ ಹಲಸಿನ ಕಾಯಿ ದೋಸೆ, ಹಲಸಿನ ಹಣ್ಣಿನ ಗೆಣಸಲೆ, ಕಡುಬು, ಕೆಸುವಿನ ಪತ್ರೊಡೆ ಇತ್ಯಾದಿ. ಮದ್ಯಾಹ್ನಕ್ಕೆ ಹಲಸಿನಕಾಯಿ ಪಲ್ಯ, ಸಾಂಬಾರು, ಹಪ್ಪಳ, ಕಾಡು ಮಾನ ಹಣ್ಣಿನ ಸಾಸಿವೆ, ಹಲಸಿನ ಹಣ್ಣಿನ ಪಾಯಸ. ಸಾಯಂಕಾಲದ ಲಘು ತಿಂಡಿಗೆ ಹಲಸಿನ ಹಪ್ಪಳ, ಚಿಪ್ಸ್[ಸೋಂಟೆ], ಉಂಡಳಕಾಳು, ಹಲಸಿನ ಬೀಜ, ಗೋಡಂಬಿ, ದೀವಿಗೆ ಹಲಸಿನ ಚಿಪ್ಸ್, ಬಜ್ಜಿ, ರಾತ್ರಿ
ಹಲಸಿನ ಕಾಯಿ/ಹಣ್ಣಿನ ದೋಸೆ, ಸೌತೆಕಾಯಿ[ಚಕ್ರಪ್ಪೆ] ದೋಸೆ. ಅಂತೂ ಬಗೆಬಗೆಯ ತಿಂಡಿಗಳು, ನಾಲ್ಕು ದಿನಗಳಲ್ಲಿ ಇಷ್ಟೆಲ್ಲಾ ತಿನ್ನುವುದು ಹೇಗೆ ಅಂತಿರಾ! ತಿನ್ನಲೇಬೇಕು ಇಲ್ಲದಿದ್ರೆ ಮುಂದಿನ ವರ್ಷದವರೆಗೆ ಕಾಬೇಕು.
ಮಹಾನಗರಿಯಲ್ಲಿ:
ಹಳ್ಳಿಗೆ ಹೋಗಿದ್ದು ನಿಜವಾದರೂ ಮಹಾನಗರಿಯಲ್ಲಿ ಏನಾಗುತ್ತಿದೆ ಎಂಬ ಯೋಚನೆ. ಕಾರಣ ಹಿಂದುರಿಗಿ ಬರಲೋಚಿಸಿದ ದಿನ ಬಂದ್ ಮಾಡುತ್ತೇವೆಂದು ಕೆಲವು ಸಂಘಟನೆಗಳು ಹೇಳಿದ್ದವು. ಅಗತ್ಯ ಹೋಗಲೇ ಬೇಕಿದ್ದರಿಂದ ಹೊರಟಿದ್ದೆ. ಮಹಾನಗರದ ಸುದ್ದಿ ತಿಳಿಯಲು ಇದ್ದ ಮಾರ್ಗ ದೂರದರ್ಶನ. ವಿದ್ಯುತ್ ಇದ್ದಾಗ ವಾರ್ತೆ ನೋಡಿ ಪರಿಸ್ಥಿತಿಯ ಅವಲೋಕನ. ಎರಡನೆ ದಿನದ ವಾರ್ತೆಯಲ್ಲಿ ನಾನು ಅಂದುಕೊಂಡಿದ್ದಂತೆ ಸಂಘಟನೆಯ ಪ್ರಮುಖರ ಬಂಧನ ಸುದ್ದಿ ಕೇಳಿ ಸ್ವಲ್ಪ ನಿರಾಳತೆ. ಪರಿಸ್ಥಿತಿ ಹತೋಟಿಯಲ್ಲಿರುವ ಆಶಯ. ಅದರ ಜೊತೆಗೆ ಹಂದಿಜ್ವರದ ಭಯ.
ಹಳ್ಳಿಯಲ್ಲಿ:
ಭೋರ್ಗರೆಯುವ ಮಳೆ. ಹಿಂದೆ ಹೇಳಿದಂತೆ ಕಾನನದೊಳಗೆ ಮರ ಧರೆಗುರುಳಿ ವಿದ್ಯುತ್ ಕಡಿತ. ಮಳೆ ಮೋಡದಿಂದಾಗಿ ಮಟ ಮದ್ಯಾಹ್ನದಲ್ಲೂ ಕತ್ತಾವರಿಸಿತ್ತು. ಬೆಳಕಿಗಾಗಿ ಎಲ್ಲೆಲ್ಲೂ ಒಂದೇ ಲಾಟೀನು. ಸಮಯ ಕಳೆಯಲು ತಿಂಡಿಗಳು, ಜೊತೆಗೆ ಒಂದಷ್ಟು ಪುಸ್ತಕಗಳು. ಮತ್ತೆ ಬಾಲ್ಯದ ನೆನಪುಗಳು. ವಿದ್ಯುತ್ತೇ ಇಲ್ಲದ ದಿನಗಳ ಹಿಂಬೇಟೆ. ನಾಲ್ಕು ದಿನಗಳಲ್ಲಿ ಪಟ್ಟಣದ ಆಧುನಿಕತೆಯಿಲ್ಲದೆ ಕಳೆದ ಹಳ್ಳಿ ಬದುಕು ಮನ ತಣಿಸಿತ್ತು. ಈ ಬಾರಿ ಕೆಲವೊಂದು ಆಧುನಿಕ ತಂತ್ರಜ್ಞಾನಗಳು ಹಳ್ಳಿಯತ್ತ ಮುಖ ಮಾಡಿದ್ದರಿಂದ ಒಂದೇ ದಿನದಲ್ಲಿ ವಿದ್ಯುತ್ ಬಂದಿತ್ತು.
ಬಹಳ ದಿನಗಳ ನಂತರ ಊರಿಗೊಂದು ಸುತ್ತು ಹಾಕಲು ಯೋಚಿಸಿ ಮೂರನೇ ದಿನ ಹೊರಟವನಿಗೆ ಮೊದಲು ಸ್ವಾಗತಿಸಿದ್ದು ಆಡುಬಾಷೆಯ ಉಂಬುಳ [ಆಂಗ್ಲಭಾಷಿಕ ಲೀಚ್]. ಅದೇನೂ ಅಂತ ವಿಷಯವಲ್ಲ, ಹಿಂದೆ ಮಳೆಗಾಲದಲ್ಲಿ ಮನೆಯಂಗಳದಲ್ಲೆ ಕಾಣುತ್ತಿತ್ತು. ಮುಂದೆ ಸಾಗಿದರೆ ಕಾಲು ದಾರಿಯ ಎರಡೂ ಬದಿ ಮುಗಿಲೆತ್ತರದ ವೃಕ್ಷಗಳು, ಅವುಗಳ ಮಧ್ಯೆಯಿಂದ ಛತ್ರಿಯ ಮೇಲೆ ಟಿಪ್ ಟಿಪೆಂದು ಬೀಳುವ ಮಳೆಹನಿಗಳು. ರಸ್ತೆ ತಲುಪಿ ನಾಲ್ಕಾರು ಹೆಜ್ಜೆ ನಡೆದರೆ ಊರ ಹೊಳೆ. ಭೋ ಎನ್ನುತ್ತಿದ್ದ ಹೊಳೆ ದಾಟಿ ಮುನ್ನಡೆದರೆ ನನ್ನ ಶಾಲೆ. ಮೊದಲ ಆಧುನಿಕ ಶಿಕ್ಷಣ ಪಡೆದ ಪ್ರಾಥಮಿಕ ಶಾಲೆ ಆಧುನಿಕ ಕೊಠಡಿಗಳು ಸೇರ್ಪಡೆಗೊಂಡಿದ್ದರೂ ಹಳೆಯ ಹೊಳಪನ್ನು ನೆನಪಿಸಿತ್ತಿತ್ತು. ಹಾಗೆಯೆ ಆಟದ ಬಯಲು, ಪರಿಚಯಸ್ಥರ ಮನೆ, ಯುವ ಮಿತ್ರರ ಯುವಕಮಂಡಲಕ್ಕೆಲ್ಲ ಒಂದು ಸುತ್ತು ಹಾಕಿ ಮನೆಗೆ ಹಿಂದುರಿಗಿದರೂ ಮಳೆಯ ಆರ್ಭಟ ಕಡಿಮೆಯಾಗಿರಲಿಲ್ಲ.
ಅಂತೂ ರಜೆಯ ಕೊನೆಯದಿನ ಅಮ್ಮ ಕಟ್ಟಿ ಕೊಟ್ಟ ತಿನಿಸುಗಳ ಜೊತೆಗೆ ಹೊರಟಾಗ ಮಳೆಯ ಸಿಂಚನವಾಗುತ್ತಿತ್ತು. ಕರ್ಣಾಟಕ ಸಾರಿಗೆ ಬಂಡಿಯಲ್ಲಿ ಕುಳಿತು ಹಸಿರಸಿರಿಯ ವೀಕ್ಷಿಸುತ್ತಾ ಮಹಾನಗರಿಯೆಡೆಗೆ ಮುಖಮಾಡಿದಾಗ ಮತ್ತೆ ಬಾಲ್ಯದ ನೆನಪುಗಳು ಕಣ್ಮುಂದೆ ಬಂದು ಹೋದವು.
ಮಹಾನಗರ ನನ್ನನ್ನು ಸ್ವಾಗತಿಸಿದ್ದು ಸಂಚಾರ ದಟ್ಟಣೆಯಿಂದ ಅದೂ ರಾತ್ರಿ ೯ರ ಅವೇಳೆಯಲ್ಲಿ. ಆಗ ನೆನಪಾಗಿದ್ದು ಇತ್ತೀಚೆಗೆ ವಿದೇಶ ಪ್ರಯಾಣ ಹೋಗಿದ್ದ ಗೆಳೆಯ ಹೇಳಿದ ಮಾತುಗಳು, ಇಲ್ಲಿ ಸಂಚಾರ ದಟ್ಟಣೆಯಿಲ್ಲದೇ ನಿದ್ದೆಯೇ ಬರೊಲ್ಲ. ರಾತ್ರಿಯೂಟಕ್ಕೆ ಹೋದಾಗ ಉಣ್ಣಲು ಬಲು ಕಷ್ಟವಾಗಿತ್ತು. ಅದೇನೂ ಆಹಾರ ಪದಾರ್ಥಗಳೋ, ಯಾವುದೇ ರುಚಿಯಿರಲಿಲ್ಲ. ಅದೇ ಹಳ್ಳಿಯ ತಿಂಡಿಗಳ ನೆನೆದರೆ ಬಾಯಲ್ಲಿ ನೀರೂರಿತ್ತಿದೆ, ನಿಮಗೆ?.
ಆದರೆ ಉದ್ಯೋಗಕ್ಕಾಗಿ ಮಹಾನಗರಿಯಲ್ಲಿರುವುದಿರರಿಂದ ಎಲ್ಲದಕ್ಕೂ ಹೊಂದಿಕೊಳ್ಳಲೇಬೇಕು. ಅಂತೆಯೇದಿನ ಬದಲಾಗುತ್ತಿದೆ, ಕಾಲ ಕಳೆಯುತ್ತಿದೆ, ಜೀವನವೂ ಕೂಡಾ ಅಲ್ಲವೇ?...

Sunday, April 26, 2009

ಚಿಗುರೊಡೆದ ಮಾಸಿದ ನೆನಪು

ಇಂದು:
ಇಳಿ ಸಂಜೆ. ಚುಮು ಚುಮು ಚಳಿ. ಪಿಟಿ ಪಿಟಿ ಮಳೆ. ಇದು ಮೊನ್ನೆಯ ಮಹಾನಗರದ [ಬೆಂಗಳೂರಿನ] ಸನ್ನಿವೇಶ. ಈ ವರ್ಷದ ಮೊದಲ ಧಾರೆ ಅಂದು ಬಂದಿತ್ತು ಮಹಾನಗರಿಗೆ.
ನಾನೂ ನೂರಾರು ಜನರಂತೆ ಸಾಮಾನ್ಯ ಪಯಣಿಗ ಮಹಾನಗರ ಸಾರಿಗೆ ಬಂಡಿಗೆ. ಎಲ್ಲೆಲ್ಲೂ ಗಬ್ಬು ವಾಸನೆ. ಏನೆಂದು ನೋಡಿದರೆ ಮುಗಿಲ ಧಾರೆಗೆ ಒಡಲ [ಚರಂಡಿ] ಧಾರೆ ಸೇರಿ ಆದ (ಅ) ವ್ಯವಸ್ಥೆ. ನಾಲ್ಕಾರು ಜನ ಬಂಡಿಯ ಕಿಟಕಿ ಪಕ್ಕದಲ್ಲಿ ಕುಳಿತ ಮಹನೀಯರು ಮಳೆ ಹನಿ ಕಡಿದರೂ, ಕಿಟಕಿ ಮುಚ್ಚಿ ಚಳಿಚಳಿ ಎನ್ನುತ್ತಿದ್ದರು. ನನಗೋ ಉಸಿರು ನಿಲ್ಲುವ ಸ್ಥಿತಿ. ಮೈಯೆಲ್ಲಾ ಬೆವರು, ಜೊತೆಗೆ ಬಂಡಿಯ ದ್ವಾರದ ಮೂಲಕ ಬರುವ ವಾಸನೆ. ಅತ್ತ ಹೊರಗೆ ನೋಡಿದರೆ ದೊಡ್ಡ ಮೋರಿ ಕೆಲಸ ನಡೆಯುತ್ತಿದೆ, ಅಡಚಣೆಗಾಗಿ ಕ್ಷಮಿಸಿ ಎಂಬ ಹಲಗೆ ಬರಹ. ಏನು ಮಾಡುವುದು ಎಂದು ಯೋಚಿಸುತ್ತಿದ್ದಾಗ ನೆನಪಾಗಿದ್ದು . . .

ಅಂದು:
ಭೋರ್ಗರೆಯುವ ಮಳೆ. ಮೈ ನಡಗಿಸುವ ಚಳಿ. ನೆನೆಸಿದರೆ ಮೈಜುಮ್ಮೆನಿಸುತ್ತದೆ. ಸುಮಾರು ಹದಿನೆಂಟು ವರುಷದ ಹಿಂದಿನ ದಿನಗಳು. ನಾನಾಗ ಎಂಟರ ಪೋರ. ಮಳೆಗಾಲದ ರಾತ್ರಿ. ಇಂದು ಶುರುವಾದ ಮಳೆ ಹನಿ ಕಡಿಯುವುದು ನಾಲ್ಕಾರು ದಿನಗಳ ನಂತರವೆ. ನನ್ನ ಮನೆ ಇರುವುದು ಮಲೆನಾಡ ಮಡಿಲಲ್ಲಿ. 'ಬಂಟ ಮಲೆ'ಯ [ಸುಳ್ಯ ತಾಲೋಕಿನ ಪಂಜ, ಕಲ್ಮಡ್ಕ, ಕುಕ್ಕುಜಡ್ಕ ಗ್ರಾಮಗಳಲ್ಲಿ] ತಪ್ಪಲಿನಲ್ಲಿ. ಮಳೆಯ ಜೊತೆ ಆರ್ಭಟಿಸುವ ಗುಡುಗು, ಕಣ್ಣು ಕೋರೈಸುವ ಮಿಂಚು. ಅಂತಹ ಒಂದು ರಾತ್ರಿ. ಅವಾಗ ಆಕಾಶವಾಣಿಯಲ್ಲಿ ಪ್ರಸಾರವಾಗುವ 'ವಾರ್ತೆಗಳು' [೭-೩೫ ರಿಂದ ೭-೪೫] ಕೇಳಿ ಊಟ ಮಾಡಿ ನಿದ್ರೆಗೆ ಜಾರುವ ಪದ್ದತಿ ನಮ್ಮ ಮನೆಯಲ್ಲಿ. ಈಗಿನಂತೆ ದೂರದರ್ಶನ, ವಿದ್ಯುತ್ ಇರಲಿಲ್ಲ ನಮ್ಮ ಮನೆಯಲ್ಲಿ. ಸೀಮೆ ಎಣ್ಣೆ ದೀಪ ಬೆಳಕಿಗಾಗಿ ಇರುವ ದಾರಿ. ಅದೋ ಸಣ್ಣ ಗಾಳಿ ಬಂದರೆ ನಂದುವುದು. ಅಂತೆಯೆ ಪದ್ದತಿಯಂತೆ ಮಲಗಿದ್ದ ನನಗೆ ಅವೇಳೆಯಲ್ಲಿ[ ಮಧ್ಯರಾತ್ರಿಯ ನಂತರ ] ಎಚ್ಚರವಾಗಿತ್ತು. ಎರಡೆರಡು ಕಂಬಳಿ ಹೊದ್ದು ಮಲಗಿದ್ದರೂ ನಡುಕ ನಿಂತಿರಲಿಲ್ಲ.ನನಗೆ ಮೂತ್ರಕ್ಕೆ ಹೋಗುವ ಅವಶ್ಯಕತೆ ಉಂಟಾಗಿ ಅಮ್ಮನ ಕರೆದೆ. ಅಮ್ಮ ನಾನು ಇಲ್ಲಿಂದಲೇ ಟಾರ್ಚು ಬಿಡುವೆ ಎಂದು ೩ ಬ್ಯಾಟರಿಯ ದೊಡ್ಡ ಟಾರ್ಚಿನ ಬೆಳಕನ್ನು ಬಿಟ್ಟಳು. ಏನು ಮಾಡುವುದು, ಹೋಗಲೇಬೇಕು, ಇಲ್ಲಾಂದ್ರೆ ಚಾಪೆ ಒದ್ದೆಯಾಗುವ ಭಯ. ಧೈರ್ಯದಿಂದ ಮುಂಬಾಗಿಲು ತೆರೆದು ಜಗಲಿಯಲ್ಲಿ
ನಿಂತು ಮೂತ್ರ ಮಾಡುತ್ತಿದ್ದಾಗ ಕಂಡು ಕೇಳಿತ್ತು, ಈಗಿನ ಪಂದ್ಯಾವಳಿಯ ನಂತರ ಬಿಡುವ ಸಿಡಿಮದ್ದಿನಂತೆ ಬೆಳಕು ಜೊತೆಗೆ ಟಪ್ ಟಪ್ . . . ಧೊಪ್ ಧೊಪೆಂಬ ಶಬ್ದ. ನಾನೋ ಭಯದಿಂದ ಅರ್ಧದಲ್ಲೆ ಕೆಲಸ ನಿಲ್ಲಿಸಿ ಒಳಗೆ ಹೋಗಿ ಮಲಗಿದವ ಎದ್ದಿದ್ದು ಮರುದಿನ ಸೂರ್ಯಪ್ರಕಾಶ ಬೆನ್ನ ಮೇಲೆ ಬಿದ್ದ ಮೇಲೆಯೆ. ರಾತ್ರಿ ನೆಟ್ಟಗಾಗಿದ ರೋಮ ಬೆಳಗ್ಗಿನವರೆಗೆ ಹಾಗೆ ಇತ್ತು.

ಆಗಿನ ಮೊದಲ ಮಳೆಯೂ ಇದೇ ರೀತಿ ಆರ್ಭಟದಿಂದಲೇ ಬರುತ್ತಿತ್ತು. ಮೊದಲ ಮಳೆಯೆಂದರೆ ಎಲ್ಲಿಲ್ಲದ ಸಂಭ್ರಮ. ಮಣ್ಣಿನ ಸುವಾಸನೆ, ಆಲಿಕಲ್ಲು, ಮರಗಿಡಗಳ ಮಧುರ ಗಾಯನ. ಈಗ ನನ್ನಂತೆ ಕೆಲವರು ಬರೆಯಲು, ನೆನಪಿಸಲು ಮಾತ್ರ. ಆ ಮಳೆ ಹನಿಯ ಜೊತೆ ಮಕ್ಕಳ ಆಟ, ದೊಡ್ಡವರ ಆರ್ಭಟ. ಇದು ಮಲೆನಾಡಿಗೆ ಮಾತ್ರ ಚೆಂದ. ಮೊದಲ ಮಳೆಗೆ ಊರ ಹೊಳೆ (ವಾಟೆಚ್ಚಾರು) ಹೊಂಬಣ್ಣದಿಂದ ತುಂಬಿ ಹರಿಯುತ್ತಿತ್ತು. ಮಳೆಗಾಲ ಆರಂಭವಾದಂತೆ ಅಟ್ಟದಲ್ಲಿಟ್ಟಿದ್ದ (ಉಪ್ಪರಿಗೆ/ಮಹಡಿ) ಹಲಸಿನ ಹಪ್ಪಳ, ಸೆಂಡಿಗೆ, ಹಲಸಿನ ಬೀಜ ಅಡುಗೆ ಮನೆಗೆ ಬರುತ್ತಿದ್ದವು. ಈ ಬಗ್ಗೆ ಇನ್ನೊಮ್ಮೆ ಬರೆಯುವೆ.

ಪ್ರಸಕ್ತ:

ಮಹಾನಗರದ ಮಳೆಗೆ ಹಲಸಿನ ಹಪ್ಪಳ ಸೆಂಡಿಗೆಗಳೆಲ್ಲಿ ಬಂತು. ಚಳಿ ಬಿಟ್ಟು ಹೊರಗೆ ಹೋದರೆ ಗುರು ಭಟ್ರ ಅಂಗಡಿಯ ಭಜ್ಜಿ ಬೋಂಡ, ಇಲ್ಲಾಂದ್ರೆ ಅಯ್ಯಂಗಾರ್ ಬೇಕರಿಯಲ್ಲಿ ಸಿಗುವ ಕರಿದ ತಿಂಡಿ ಮತ್ತು ಬೈಟು ಕಾಫಿ. ಇನ್ನು ಹೆಚ್ಚ್ಚು ಜನ ಬಯಸುವುದು ವಿದೇಶಿ ಶಕ್ತಿಯ ಅದೇನೊ ಹೇಳುತಾರಲ್ಲ 'ಲೇಸ್' [ಬೂಟ್ ಕಟ್ಟುವುದಲ್ಲ], ಕುರು ಕುರೆ. ಅದನ್ನೆ ಆಂಗ್ಲ ಭಾಷಿಕ ' ಜಂಕ್ ಫುಡ್' ಅಂದುಕೊಂಡೇ ಮೆಲ್ಲುವವರೇ ಹೆಚ್ಚು.
ಅಂತೂ ಮಹಾನಗರ ಸಾರಿಗೆ ಬಂಡಿ ನಾನಿಳಿಯುವ ನಿಲ್ದಾಣಕ್ಕೆ ಬಂದಾಗ ಯೋಚನಾಲಹರಿಯಿಂದ ಹೊರ ಬಂದೆ. ಇತ್ತ ಮಳೆಯೂ ಕಡಿಮೆಯಾಗಿತ್ತು. ಮನೆಗೆ ಬಂದು ದೂರದರ್ಶನ ಹಾಕಿದರೆ ಅದರಲ್ಲಿ ಚುನಾವಣಾ ಭರಾಟೆಯೊಂದಿಗೆ ಜಯನಗರದಲ್ಲಿ ೨ ಮರ, ಸದಾಶಿವ ನಗರದಲ್ಲಿ ೩ ಮರ ಧರೆಗುರುಳಿ ರಸ್ತೆ ಸಂಚಾರಕ್ಕೆ ಅಡ್ಡಿ ಎಂಬ 'ತುಂಡರಿಸುವ ವಾರ್ತೆ' [ಬ್ರೇಕಿಂಗ್ ನ್ಯೂಸ್] ದೊಡ್ಡ ಅಡಿ ಬರಹಗಳೊಂದಿಗೆ ಪ್ರಸಾರವಾಗುತ್ತಿತ್ತು. ಮತ್ತೆ ಯೋಚನಾ ಲಹರಿಗೆ ಬಿದ್ದ ನನಗೆ ನೆನಪಾಗಿದ್ದು ಅದೇ ಹಿಂದಿನ ಊರ ಪರಿಸ್ಥಿತಿ.

ಹಿಂದೆ:

ನಮ್ಮ ಮನೆಗೂ ವಿದ್ಯುದ್ದೀಪ ಬೇಕೆಂದು ಹಾಕಿಸಿಕೊಂಡಿದ್ದೆವು. ಅದಾಗಿ ಒಂದೇ ತಿಂಗಳಲ್ಲಿ ಶುರುವಾದ ಮೊದಲ ದಿನ ರಾತ್ರಿಯೆ ವಿದ್ಯುತ್ ಮಂಗ ಮಾಯ. ಏನಾಯ್ತು ಅಂತ ಕೇಳಿದ್ರೆ ಅದು ಮತ್ತಿಗುಡ್ಡೆ [ಬಂಟಮಲೆಯ ತಪ್ಪಲು ಪ್ರದೇಶ, ನಮ್ಮ ಊರು ಮತ್ತು ಪಕ್ಕದ ಊರಿನ ಗಡಿ ಬ್ರೃಹತ್ ಮರಗಳಿಂದ ಕೂಡಿದ ಪ್ರದೇಶ] ಯಲ್ಲಿ ಒಂದು ದೊಡ್ಡ ಚಿರ್ಪಿನ ಮರ ಬಿದ್ದು ವಿದ್ಯುತ್ ಕಂಬಗಳೆರಡು ಧರೆಗುರುಳಿದೆ ಎಂಬ ಸುದ್ದಿ. ಮುಂದೆ ಮನೆಯಲ್ಲಿ ವಿದ್ಯುದ್ದೀಪ ಉರಿಸಲು ಒಂದು ತಿಂಗಳೇ ಹಿಡಿಯಿತು. ಈಗ ಅಂತಿಲ್ಲ, ದಿನೆ ದಿನೇ ಹೊಸ ಹೊಸ ತಂತ್ರಜ್ಞಾನ ಬರುತ್ತಿದೆ. ಬದುಕು ಯಾಂತ್ರಿಕಮಯವಾಗುತ್ತಿದೆ. ಅಂತಹ ಸಂದರ್ಭದಲ್ಲಿ ಹಿಂದಿನ ಮದುರಮಯ ಜೀವನದ ತುಣುಕುಗಳನ್ನು ನೆನಪಿಸುವಲ್ಲಿ ಇಷ್ಟೆಲ್ಲ ಬರೆಯಬೇಕಾಯಿತು. ಇನ್ನು ಓದುಗರಾದ ನೀವು ಈ ಬಗ್ಗೆ ಏನು ಹೇಳುವಿರಿ ಎಂದು ತಿಳಿಯುವ ಕುತೂಹಲ ನನಗಿದೆ.

ಪ್ರೀತಿಯಿರಲಿ.
ನಿಮ್ಮ ಅಜ್ಜಕಾನ ರಾಮ.

Monday, April 13, 2009

ಮೊದಲ ಸಲ ಬ್ಲಾಗ್ ರಚಿಸಿದಾಗ ಏನು ಬರೆಯುವುದು ತಿಳಿಯುತ್ತಿಲ್ಲ ಅನ್ನುವುದಕ್ಕಿಂತ ಸಮಯದ ಅಭಾವ ಕಾಡುತ್ತಿದೆ. ಕಂಡಿತ ಬರೆಯುವೆ ಕೆಲವೇ ದಿನಗಳಲ್ಲಿ.